== ಸ್ಥಳ == ಬಂಗವಾಡಿಯ ಶ್ರೀ ಶಾಂತಿನಾಥ ಸ್ವಾಮಿ ಬಸದಿಯು ಈಗಿನ ಬಂಗವಾಡಿ ಪೇಟೆಯ ಮಧ್ಯದಲ್ಲಿದೆ. ಬೆಳ್ತಂಗಡಿ-ಕಿಲ್ಲೂರು ರಸ್ತೆಯ ಬದಿಯಲ್ಲಿ ಅರಮನೆಯ ಎದುರುಗಡೆಯಲ್ಲಿದೆ. == ಇತಿಹಾಸ == ಇದನ್ನು ಕ್ರಿ.ಶ. ಸುಮಾರು ೧೭೦೦ರಲ್ಲಿ ಬಂಗವಾಡಿಯ ಅರಮನೆಯಲ್ಲಿದ್ದು, ಶ್ರೀ ರಾಮಚಂದ್ರ ಚರಿತ್ರ ಎಂಬ ಗ್ರಂಥವನ್ನು ಬರೆದಿದ್ದ ಚಂದ್ರಶೇಖರ ಕವಿಯು ತನ್ನ ಗ್ರಂಥದಲ್ಲಿ ಈ ರೀತಿ ಹೇಳಿದ್ದಾರೆ. ಪ್ರಾಚೀನ ಕಾಲದಲ್ಲಿ ಒಂದು ಶಾಂತಿನಾಥ ಬಸದಿಯು ಹಿಂದಿನ ಕೋಟೆಯೊಳಗೆ ಇತ್ತು ಎಂದು ಹೇಳಲಾಗುತ್ತದೆ. ಅಲ್ಲಿ ಪೂಜಿಸಲ್ಪಡುತ್ತಿದ್ದ ಶ್ರೀ ಶಾಂತಿನಾಥಸ್ವಾಮಿಯನ್ನು ಕೋಟೆಯ ಶಾಂತಿನಾಥಸ್ವಾಮಿಯೆಂದು ಕರೆಯುತ್ತಿದ್ದರು. ಪೂರ್ಣ ಪ್ರಮಾಣದಲ್ಲಿ ಬೆಳೆದಿರುವ ಮಕರತೋರಣದಿಂದ ಅಲಂಕೃತವಾದ ಪ್ರಭಾವಳಿ ಇರುವ ಈಗಿನ ಸುಂದರ ಜಿನಬಿಂಬವು ವಿಜಯನಗರ ಕಾಲದ್ದೆಂದು ಹೇಳುವುದರಲ್ಲಿ ಈನೂ ಸಂಶಯವಿಲ್ಲ. ಅಭಿನವ ಲಲಿತ ಕೀರ್ತಿ ದೇವರ ಸನ್ನಿಧಿಯಲ್ಲಿ ಕಾಮಿರಾಯರಸನ ಕಾಲದಲ್ಲಿ ಬಂಗವಾಡಿ ಪಟ್ಟಣದ ಸೇನಬೋತ್ತಿ ದೇವಕ್ಕ ಸೆಟ್ಟಿತಿಯು ಬಾಹುಬಲಿ ಸ್ವಾಮಿಯ ಒಂದು ಬಿಂಬವನ್ನು ಮಾಡಿಸಿದ್ದನ್ನು ತಿಳಿಸುತ್ತದೆ. ಅದರಂತೆ ಇಲ್ಲಿ ಕೆಲವು ಶಿಲಾಶಾಸನಗಳೂ, ತಾಮ್ರ ಶಾಸನಗಳೂ ಸಿಕ್ಕಿವೆ. ಕ್ರಿ.ಶ. ೧೯ನೇ ಶತಮಾನದ ಪ್ರಾರಂಭದಲ್ಲಿ ಬೆಳ್ಳೂರು ಗುತ್ತಿನವರು ಇದರ ಮಾಡಿಗೆ ತಾಮ್ರದ ತಗಡನ್ನು ಹೊದಿಸಿ, ಜೀರ್ಣೋದ್ಧಾರಗೊಳಿಸಿದ್ದರು. ಕ್ರಿ.ಶ ೧೮೯೮-೯೯ರಲ್ಲಿ ಅರಮನೆಯ ಬಂಗರಾಜರು ಇದರ ಪೂರ್ಣ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಂಡಿದ್ದರು. == ವಿನ್ಯಾಸ == ಬಸದಿಯ ಸುತ್ತಲಿರುವ ಪಟ್ಟಕಗಳ ಶಿಲಾಸ್ತಂಭಗಳಿಂದಲೂ, ಎದುರಿನ ಗೋಪುರದಲ್ಲಿ ಸರಳ ರೂಪದ ಪಟ್ಟಕಗಳಿಂದ ಅಲಂಕೃತವಾಗಿರುವ ಸ್ತಂಭಗಳಿAದಲೂ ಈ ಸಮಗ್ರ ಬಸದಿಯು ವಿಜಯನಗರ ಕಾಲದಲ್ಲಿ ನಿರ್ಮಾಣಗೊಂಡಿತ್ತೆಂದು ಹೇಳಬಹುದು. ಒಂದು ಪೂರ್ಣ ಪ್ರಮಾಣದ ಬಸದಿಗೆ ಇರುವ ಎಲ್ಲಾ ಮಂಟಪಗಳೂ, ಮೇಗಿನ ನೆಲೆಯೂ ಇರುವ ಈ ಸುಂದರ ಜಿನಾಲಯವು ಬಂಗ ಅರಸರ ಇತಿಹಾಸದ ವೈಭವಕ್ಕೆ ಸಾಕ್ಷಿಯಾಗಿ ನಿಂತಿದೆ, ಸುತ್ಲೂ ಸುಖಸಂಪತ್ತು ಹಾಗೂ ವೈಭವವಿದ್ದು, ಪುಷ್ಪೋದ್ಯಾನ ಮಧ್ಯದಲ್ಲಿ ಕಂಗೊಳಿಸುತ್ತಿತ್ತು. ಈ ಬಸದಿಯ ಗರ್ಭಗೃಹದಲ್ಲಿರುವ ಮೂಲ ನಾಯಕ ಶ್ರೀ ಶಾಂತಿನಾಥ ಸ್ವಾಮಿಯ ವಿಗ್ರಹವು ಸುಮಾರು ೪.೫ ಅಡಿ ಎತ್ತರವಿದ್ದು, ಖಡ್ಗಾಸನ ಭಂಗಿಯಲ್ಲಿದೆ, ಪ್ರಾರ್ಥನಾ ಮಂಟಪದಲ್ಲಿ ಒಂದು ಚಿಕ್ಕ ಶಿಲಾಖಂಡದ ಮೇಲೆ ಮುನಿಗಳ ಪಾದದ ಆಕೃತಿಯನ್ನು ಮಾಡಿಸಲಾಗಿದೆ. ಮೇಲಿನ ನೆಲೆಯಲ್ಲಿ ಸುಮಾರು ೨.೫ ಅಡಿ ಎತ್ತರದ ಶ್ರೀ ಆದೀಶ್ವರ ಸ್ವಾಮಿಯ ಬಿಂಬವಿದೆ. ಇದರಲ್ಲಿ ಸ್ವಾಮಿಯ ಕೇಶವು ಭುಜಗಳ ಮೇಲೆ ಹರಡಿರುವುದನ್ನೂ, ಪ್ರಭಾವಲಯದಲ್ಲಿ ಚೌಕುಳಿಯಾಕಾರದ ಚಿತ್ರಿಕೆಗಳಿರುವುದನ್ನೂ ಗಮನಿಸಿಕೊಂಡರೆ, ಈ ಬಿಂಬವು ಬಹು ಪ್ರಾಚೀನವಾದುದೆಂದು ಹೇಳಬೇಕಾಗುತ್ತದೆ. == ಆವರಣ == ಬಸದಿಯ ಪ್ರಾಂಗಣದ ನೈಋತ್ಯ ಮೂಲೆಯಲ್ಲಿ ಕ್ಷೇತ್ರ ಪಾಲನ ಸನ್ನಿಧಾನವೂ ಉತ್ತಮ ಸ್ಥಿತಿಯಲ್ಲಿದೆ. ಬಸದಿಯ ಸುತ್ತಲೂ ಭದ್ರವಾದ ಪ್ರಾಕಾರಗೋಡೆಯಿದ್ದು ರಕ್ಷಣೆಯನ್ನು ಒದಗಿಸುತ್ತದೆ. ಬಸದಿಯ ಸುತ್ತಲೂ ವಿಶಾಲವಾದ ಪ್ರಾಂಗಣವಿದೆ. == ಉಲ್ಲೇಖಗಳು ==